ದೆಹಲಿ, 13 ಜನವರಿ(ಹಿ.ಸ):
ಆ್ಯಂಕರ್ :
ದೆಹಲಿಯ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಸಿಎಂ ಅರವಿಂದ್ ಕೇಜ್ರಿವಾಲ್ ಗೆ 4ನೇ ಬಾರಿಗೆ ಸಮನ್ಸ್ ಜಾರಿ ಮಾಡಿದ್ದು, ಜನವರಿ 18ರಂದು ಹಾಜರಾಗುವಂತೆ ಸೂಚಿಸಿದೆ. ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಇಡಿ ನೀಡಿರುವ ನಾಲ್ಕನೇ ಸಮನ್ಸ್ ಇದಾಗಿದ್ದು, ಇದಕ್ಕೂ ಮುನ್ನ ನವೆಂಬರ್ 2 ರಂದು, 21ರಂದು ಹಾಗೂ ಜನವರಿ 3 ರಂದು ಮೂರು ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
ಈ ನಾಲ್ಕನೇ ಸಮನ್ಸ್ ಬಳಿಕ ಅರವಿಂದ್ ಕೇಜ್ರಿವಾಲ್ ಇಡಿ ಮುಂದೆ ಹಾಜರಾಗುತ್ತಾರೋ ಇಲ್ಲವೋ ಕಾದುನೋಡಬೇಕಿದೆ. ಕೊನೆಯ ಸಮನ್ಸ್ ನಂತರ ಆಮ್ ಆದ್ಮಿ ಪಕ್ಷವು ಇಡಿಯೊಂದಿಗೆ ಸಹಕರಿಸಲು ಬಯಸುತ್ತದೆ ಎಂದು ಹೇಳಿತ್ತು. ನಾಲ್ಕನೇ ಸಮನ್ಸ್ಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಕೇಜ್ರಿವಾಲ್ ಬಂಧಿಸಲು ಎಲ್ಲಾ ತಯಾರಿ ನಡೆಸಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ, ಇಷ್ಟೇ ಅಲ್ಲದೆ ವಿಚಾರಣೆ ನೆಪದಲ್ಲಿ ಅವರನ್ನು ಕರೆಸಿ ಬಂಧಿಸಲು ಇಡಿ ನಿರ್ಧರಿಸಿದೆ ಎಂದಿದೆ.
ದೆಹಲಿ ಸರ್ಕಾರದ ಸಚಿವರಾದ ಅತಿಶಿ, ಸೌರಭ್ ಭಾರದ್ವಾಜ್, ರಾಜ್ಯಸಭಾ ಸಂಸದ ಸಂದೀಪ್ ಪಾಠಕ್ ಅವರು ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದರು, ಅದರಲ್ಲಿ ಕೇಜ್ರಿವಾಲ್ ಮನೆ ಮೇಲೆ ಇಡಿ ದಾಳಿ ನಡೆಸಬಹುದು ಎಂದು ಬರೆದುಕೊಂಡಿದ್ದರು.
ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ದಾಳಿ ನಡೆಸಿದ್ದು, ಪಕ್ಷವನ್ನು ಕಾನೂನಿಗಿಂತ ತನ್ನನ್ನು ಹೆಚ್ಚು ಎಂದು ಪರಿಗಣಿಸುತ್ತಾರೆ ಎಂದಿದ್ದಾರೆ. ಕಳೆದ ವರ್ಷ ಏಪ್ರಿಲ್ 16ರಂದು ದೆಹಲಿಯ ಮದ್ಯನೀತಿ ಹಗರಣದಲ್ಲಿ ಇಡಿ ಅರವಿಂದ್ ಕೇಜ್ರಿವಾಲ್ ಅವರನ್ನು ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.
ನವೆಂಬರ್ 2 ರಂದು ವಿಚಾರಣೆಗಾಗಿ ಸಮನ್ಸ್ ಜಾರಿ ಮಾಡಿತ್ತು, ಆದರೆ 5 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ನಿರತರಾಗಿರುವ ಕಾರಣ ಹಾಜರಾಗಿರಲಿಲ್ಲ.
ಇದಾದ ಬಳಿಕ ಡಿಸೆಂಬರ್ 18 ರಂದು ಇಡಿ ಮತ್ತೆ ಸಮನ್ಸ್ ಜಾರಿ ಮಾಡಿತ್ತು, ಡಿಸೆಂಬರ್ 21 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಕೇಜ್ರಿವಾಲ್ ಹಾಜರಾಗಿರಲಿಲ್ಲ. ಕಳೆದ ವರ್ಷ ಇದೇ ಪ್ರಕರಣದಲ್ಲಿ ದೆಹಲಿಯ ಉಪಮುಖ್ಯಮಂತ್ರಿಯಾಗಿದ್ದ ಮನೀಷ್ ಸಿಸೋಡಿಯಾ ಅವರನ್ನು ಇಡಿ ಬಂಧಿಸಿತ್ತು.
ಹಿಂದೂಸ್ತಾನ್ ಸಮಾಚಾರ್
