ಆ್ಯಂಕರ್ :ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನ ಸೌಧ ಅವರಣದಲ್ಲಿ ಬೃಹತ್ ಪ್ರಮಾಣದ ಜನತಾ ದರ್ಶನ ಕಾರ್ಯಕ್ರಮ ನಡೆಸಲಿದ್ದು ರಾಜ್ಯದ ವಿವಿಧ ಮೂಲೆಗಳಿಂದ ಜನರ ಸಮಸ್ಯೆಗಳಿಗೆ ಆಗಿಂದಾಗ್ಲೆ ಪರಿಹಾರ ಒದಗಿಸಲಿದ್ದಾರೆ.
ರಾಜ್ಯದ ಹಲವಾರು ಭಾಗಗಳಿಂದ ಸುಮಾರು 10,000 ಜನ ಜನತಾ ದರ್ಶನದಲ್ಲಿ ಭಾಗವಹಿಸಲಿದ್ದಾರೆ ಮತ್ತು ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೇಲ್ವೇ ನಿಲ್ದಾಣ ಮತ್ತು ಕೆಂಪೇಗೌಡ ಬಸ್ ಟರ್ಮಿನಲ್ ನಿಂದ ವಿಧಾನ ಸೌಧಕ್ಕೆ ವಿಶೇಷ ಬಸ್ ಸೌಕರ್ಯವನ್ನು ಬಿಎಂಟಿಸಿ ಕಲ್ಪಿಸಲಿದೆ.
ಸಿದ್ದರಾಮಯ್ಯ ಕಳೆದ ಸೆಪ್ಟೆಂಬರ್ ನಲ್ಲಿ ಒಂದು ಜನತಾ ಕಾರ್ಯಕ್ರಮ ನಡೆಸಿದ್ದರು. ಆಗ 4,130 ದೂರುಗಳನ್ನು ದಾಖಲಿಸಲಾಗಿತ್ತು ಮತ್ತು ಅವುಗಳ ಪೈಕಿ ಶೇಕಡ 90ರಷ್ಟು ದೂರುಗಳಿಗೆ ಪರಿಹಾರ ಒದಗಿಸಲಾಗಿದೆ ಎಂದು ಗೊತ್ತಾಗಿದೆ. ವಿವಿಧ ಇಲಾಖೆಗಳ ಕೌಂಟರ್ ಗಳನ್ನು ಸ್ಥಾಪಿಸಲಾಗುವುದು ಮತ್ತು ಆಯಾ ಇಲಾಖೆಗಳ ಅಧಿಕಾರಿಗಳು ಕೌಂಟರ್ ಗಳಲ್ಲಿ ಹಾಜರಿರುವರು. ಜನರಿಗೆ ತೊಂದರೆಯಾಗದಿರಲು ದೈತ್ಯಗಾತ್ರದ 20 ಎಲ್ ಇ ಡಿ ಸ್ಕ್ರೀನ್ ಗಳನ್ನು ಸಹ ಅಳವಡಿಸಲಾಗುವುದು. ಅಹವಾಲುಗಳನ್ನು ಸಲ್ಲಿಸಲಿಚ್ಛಿಸುವವರು ತಮ್ಮ ಆಧಾರ್ ಇಲ್ಲವೇ ಪಡಿತರ ಚೀಟಿಯೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡ ಬಳಿಕ ಅವರಿಗೊಂದು ಚೀಟಿ ನೀಡಲಾಗುತ್ತದೆ.
