ರುದ್ರಾಪುರ್ , ಆ್ಯಂಕರ್:ಉತ್ತರಾಖಂಡದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಬಿಜೆಪಿ ಮೂರನೇ ಬಾರಿಗೆ ಆಯ್ಕೆಯಾದರೆ ಭಾರತಕ್ಕೆ ಬೆಂಕಿ ಹತ್ತಿಕೊಳ್ಳಲಿದೆ ಎಂಬ ರಾಹುಲ್ ಗಾಂಧಿಯವರ ಇತ್ತೀಚಿನ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದು, “ಇದು ಪ್ರಜಾಪ್ರಭುತ್ವದ ಭಾಷೆಯೇ?”ಎಂದು ಕೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಭಾನುವಾರ ವಿರೋಧ ಪಕ್ಷಗಳು ರಾಮಲೀಲಾ ಮೈದಾನದಲ್ಲಿ ನಡೆಸಿದ ಬೃಹತ್ ರ್ಯಾಲಿಯಲ್ಲಿ ರಾಹುಲ್ ಗಾಂಧಿ , ಪ್ರಧಾನಿ ಮೋದಿ ಚುನಾವಣೆಯ ಪಂದ್ಯವನ್ನು ಫಿಕ್ಸ್ ಮಾಡಿದ್ದಾರೆ. ಚುನಾವಣೆಗೆ ಮುನ್ನ ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ಹೇಳಿದರು. ಈ ನಿಗದಿತ ಚುನಾವಣೆಗಳಲ್ಲಿ ಬಿಜೆಪಿ ಗೆದ್ದು ಸಂವಿಧಾನವನ್ನು ಬದಲಾಯಿಸಿದರೆ ದೇಶದಲ್ಲಿ ಬೆಂಕಿ ಹತ್ತಿಕೊಳ್ಳಲಿದೆ, ಇದನ್ನು ನೆನಪಿಡಿ ಎಂದು ಹೇಳಿದ್ದರು.
“ದೇಶವು ಮೂರನೇ ಬಾರಿಗೆ ಬಿಜೆಪಿಯನ್ನು ಆರಿಸಿದರೆ ದೇಶಕ್ಕೆ ಬೆಂಕಿ ಹಚ್ಚಲಾಗುವುದು ಎಂದು ಕಾಂಗ್ರೆಸ್ ಶಾಹಿ ಕುಟುಂಬದ ಶಹಜಾದಾ (ರಾಜಕುಮಾರ) ಸ್ಪಷ್ಟ ಕರೆ ನೀಡಿದ್ದಾರೆ. ಅವರು 70 ವರ್ಷಗಳ ಕಾಲ ಆಡಳಿತ ನಡೆಸಿದ ನಂತರ 10 ವರ್ಷಗಳ ಕಾಲ ಅಧಿಕಾರದಿಂದ ಹೊರಗುಳಿದಿದ್ದಾರೆ. ದೇಶ ಮತ್ತು ದೇಶಕ್ಕೆ ಬೆಂಕಿ ಹಚ್ಚುವ ಮಾತನಾಡುತ್ತಿದ್ದಾರೆ ಇದನ್ನು ನೀವು ಒಪ್ಪುತ್ತೀರಾ?ದೇಶಕ್ಕೆ ಬೆಂಕಿ ಹಚ್ಚಲು ಬಿಡುತ್ತೀರಾ?ಈ ಭಾಷೆ ಸ್ವೀಕಾರಾರ್ಹವೇ?ಇದು ಪ್ರಜಾಪ್ರಭುತ್ವದ ಭಾಷೆಯೇ? ಇಂತಹ ಮಾತುಗಳನ್ನಾಡಿದವರನ್ನು ಶಿಕ್ಷಿಸುವುದಿಲ್ಲವೇ? ಎಂದು ಮೋದಿ ಕೇಳಿದ್ದಾರೆ.
“ಪ್ರಜಾಪ್ರಭುತ್ವದಲ್ಲಿ ಕಾಂಗ್ರೆಸ್ ಮತ್ತು ಅದರ ತುರ್ತು ಮನಸ್ಥಿತಿಯನ್ನು ಯಾರೂ ನಂಬುವುದಿಲ್ಲ. ಹಾಗಾಗಿ ಅವರು ಈಗ ಜನರನ್ನು ಪ್ರಚೋದಿಸುತ್ತಿದ್ದಾರೆ. ಕಾಂಗ್ರೆಸ್ ಭಾರತವನ್ನು ಅಸ್ಥಿರತೆಯತ್ತ ಕೊಂಡೊಯ್ಯಲು ಬಯಸಿದೆ” ಎಂದಿದ್ದಾರೆ ಮೋದಿ.
ಕೇಂದ್ರ ಬಜೆಟ್ ಮಂಡನೆಯಾದ ನಂತರ ಉತ್ತರ-ದಕ್ಷಿಣ ಎಂದು ಹೇಳಿಕೆ ನೀಡಿ ಗದ್ದಲ ಎಬ್ಬಿಸಿದ ಕರ್ನಾಟಕದ ನಾಯಕ ಡಿ.ಕೆ.ಸುರೇಶ್ ಅವರ ಹೆಸರನ್ನು ಹೆಸರಿಸದೆ, ಟೀಕಿಸಿದ ಮೋದಿ “ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು ದೇಶವನ್ನು ಉತ್ತರ ಮತ್ತು ದಕ್ಷಿಣ ಎಂದು ವಿಭಜಿಸುವ ಮಾತನಾಡಿದ್ದಾರೆ, ಅಂತಹ ವ್ಯಕ್ತಿಯನ್ನು ಶಿಕ್ಷಿಸಬೇಕಲ್ಲವೇ? ಆದರೆ ಕಾಂಗ್ರೆಸ್ ಅವರಿಗೆ ಚುನಾವಣಾ ಟಿಕೆಟ್ ನೀಡಿದೆ.ಬಿಪಿನ್ ರಾವತ್ ಅವರನ್ನು ಕಾಂಗ್ರೆಸ್ ನಿಂದಿಸಿರುವುದನ್ನು ಉತ್ತರಾಖಂಡ ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.
ತಮ್ಮ ಭಾಷಣದಲ್ಲಿ ಪಿಎಂ ಮೋದಿ ಸಿಎಎ ಬಗ್ಗೆ ಪ್ರಸ್ತಾಪಿಸಿದ್ದು, ಕಾಂಗ್ರೆಸ್ ಎಷ್ಟೇ ವಿರೋಧಿಸಿದರೂ ನಿರಾಶ್ರಿತರಿಗೆ ಮೋದಿಯವರ ಭರವಸೆ ಇದೆ ಎಂದು ಹೇಳಿದರು.
