ಬಳ್ಳಾರಿ, 6 ಡಿಸೆಂಬರ್(ಹಿ.ಸ):
ಆ್ಯಂಕರ್ : ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗೀಯ ಕಚೇರಿಯಲ್ಲಿ ವಿಭಾಗೀಯ ಸೆಕ್ಯುರಿಟಿ ಅಧಿಕಾರಿಯಾಗಿದ್ದ ಬಿ. ಹುಸೇನಪ್ಪ (55) ಅವರ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಗಳು ಕರಾಟೆ ತರಬೇತುದಾರ ಕಟ್ಟೆಸ್ವಾಮಿ (41) ಮತ್ತು ಕೊಳಗಲ್ಲು ನಿವಾಸಿ ಮಾನಪ್ಪ (40). ಈ ಇಬ್ಬರೂ ಕೊಲೆಯಾದ ಬಿ. ಹುಸೇನಪ್ಪ ಅವರ ಜೊತೆ ಹಣಕಾಸಿನ ವ್ಯವಹಾರ ಮಾಡಿದ್ದರು. ಹಣಕಾಸು ವ್ಯವಹಾರವೇ ಈ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ನೇಮಕಾತಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬಿ. ಹುಸೇನಪ್ಪ ಅವರನ್ನು ಆರೋಪಿಗಳು ಸೆಂಟ್ರಲ್ ಜೈಲ್ನ ಸಮೀಪದ ಬ್ಲೂಸ್ಕೈ ಶಾಲೆಗೆ ಸಮೀಪದಲ್ಲಿ ಆಗಸ್ಟ್ 6 ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಇಬ್ಬರು ಪತ್ನಿಯರನ್ನು ಹೊಂದಿದ್ದ ಬಿ. ಹುಸೇನಪ್ಪ ಅವರ ಕೊಲೆ ಅನೇಕ ಅನುಮಾನಗಳಿಗೆ ಕಾರಣವಾಗಿತ್ತು.
ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಾಗ ವೈಜ್ಞಾನಿಕ ಉಪಕರಣಗಳನ್ನು ಆಧರಿಸಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಇಬ್ಬರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ ತನಿಖೆ ಮುಂದುವರೆದಿದೆ.
