ಬಳ್ಳಾರಿ,, 22 ಜನವರಿ(ಹಿ.ಸ):
ಆ್ಯಂಕರ್: ಸಂವಿಧಾನದ ಆಶಯ ಮತ್ತು ಮೌಲ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸ್ತಬ್ಧಚಿತ್ರವು ಜ.26 ರಿಂದ ಫೆ.26 ರ ವರೆಗೆ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿ, ತಾಲ್ಲೂಕು, ಸ್ಥಳೀಯ ನಗರಾಡಳಿತ ಪ್ರದೇಶದಲ್ಲಿ ಸಂಚರಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ್ ಅವರು ತಿಳಿಸಿದ್ದಾರೆ.
ಭಾರತ ಸಂವಿಧಾನ ಅಂಗೀಕರಿಸಿಕೊಂಡ 75ನೇ ವರ್ಷದ ಆಚರಣೆಯ ಪ್ರಯುಕ್ತ “ಸಂವಿಧಾನ ಜಾಗೃತಿ ಜಾಥಾ” ಎಂಬ ಶೀರ್ಷಿಕೆಯಡಿಯಲ್ಲಿ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ನಡೆಸಲಾಗುತ್ತಿದ್ದು, ಜ.26 ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದು ಹಾಗೂ ಅದೇ ದಿನ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಮತ್ತು ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಸದಸ್ಯರುಗಳು ಹಾಗೂ ಜನಪ್ರತಿನಿಧಿಗಳು ಜಿಲ್ಲಾ ಕೇಂದ್ರದಲ್ಲಿ ವಿಮ್ಸ್ ಮೈದಾನದಲ್ಲಿ ಸಂವಿಧಾನ ಜಾಗೃತಿ ಜಾಥಾ ಸ್ಥಬ್ದಚಿತ್ರ (ಖಿಚಿbಟeಚಿu) ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
“ಸಂವಿಧಾನ ಜಾಗೃತಿ ಜಾಥಾ” ಸ್ತಬ್ಧಚಿತ್ರವು ಸಂಚಾರದ ಮಾರ್ಗ ನಕ್ಷೆ ಸಿದ್ದಪಡಿಸಲಾಗಿದ್ದು, ಜಾಥಾವು ಜ.26 ರಿಂದ ಫೆ.02 ರವರೆಗೆ ಬಳ್ಳಾರಿ ತಾಲ್ಲೂಕು, ಫೆ.02 ರಿಂದ 09 ರವರೆಗೆ ಸಿರುಗುಪ್ಪ ತಾಲ್ಲೂಕು, ಫೆ.10 ರಿಂದ 13 ರವರೆಗೆ ಕುರುಗೋಡು ತಾಲ್ಲೂಕು, ಫೆ.13 ರಿಂದ 16 ರವರೆಗೆ ಕಂಪ್ಲಿ ತಾಲ್ಲೂಕು ಮತ್ತು ಫೆ.16 ರಿಂದ 23 ರವರೆಗೆ ಸಂಡೂರು ತಾಲ್ಲೂಕುಗಳ ಮೂಲಕ ಸಂಚರಿಸಲಿದೆ.
ಅಂತಿಮವಾಗಿ ಜಾಥಾವು ಫೆ.24 ರಂದು ಬೆಂಗಳೂರಿನ ಅರಮನೆ ಮೈದಾನ ಸೇರಲಿದ್ದು, ಫೆ.25 ರಂದು ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ಸಾರ್ವಜನಿಕ ಬೃಹತ್ ಸಮಾವೇಶ ಕಾರ್ಯಕ್ರಮ ನಡೆಯಲಿದೆ.
ಜಾಥಾವು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳ ಮೂಲಕ ಹಾದು ಹೋಗಲಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಮುಖಂಡರು ಮಹಿಳಾ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ್ ಅವರು ಕೋರಿದ್ದಾರೆ.
