ಬೆಂಗಳೂರು,17 ಅಕ್ಟೋಬರ್ (ಹಿ.ಸ):
ಆ್ಯಂಕರ್ :
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕಳೆದ ಒಂದು ತಿಂಗಳಿನಿಂದ ಕನ್ನಡಪರ ಸಂಘಟನೆಗಳು ಮತ್ತು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ತಿಂಗಳು ವಿವಿಧ ಸಂಘಟನೆಗಳು ಬೆಂಗಳೂರು ಮತ್ತು ಕರ್ನಾಟಕ ಬಂದ್ಗೆ ನಡೆಯಿತು. ಆದರೂ ತಮಿಳುನಾಡಿಗೆ ನೀರು ಹರಿಯುವುದು ಮಾತ್ರ ನಿಂತಿಲ್ಲ. ಈ ಹಿನ್ನೆಲೆಯಲ್ಲಿ ನಿರಂತರವಾಗಿ ಪ್ರತಿಭಟನೆ ಮುಂದುವರೆದಿದೆ. ಇಂದು (ಅ.17) ರಾಜ್ಯ ಸರ್ಕಾರದ ವಿರುದ್ಧ ಮಂಗಳವಾರ ಮಧ್ಯಾಹ್ನ ‘ಕನ್ನಡ ಒಕ್ಕೂಟ-ಕರ್ನಾಟಕ ರಾಜ್ಯ’ ಹೋರಾಟಗಾರರು ಹಾಗೂ ಕನ್ನಡ ಚಳವಳಿ ವಾಟಾಳ್ ಪಕ್ಷ ಮತ್ತು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದರು.
ಪೊಲೀಸರು ವಾಟಾಳ್ ನಾಗರಾಜ್, ಕೆ.ಆರ್.ಕುಮಾರ್ ಸೇರಿದಂತೆ ಇನ್ನಿತರ ಹೋರಾಟಗಾರರನ್ನು ದೇವರಾಜ ಅರಸು ಗೇಟ್ ಬಳಿ ತಡೆದು ವಶಕ್ಕೆ ಪಡೆದರು. ಈ ವೇಳೆ ಮಾತನಾಡಿದ ಅವರು ಕಾವೇರಿ ನೀರನ್ನು ನಿರಂತರವಾಗಿ ತಮಿಳುನಾಡಿಗೆ ಬಿಡುತ್ತಿದ್ದಾರೆ. ಸಿದ್ಧರಾಮಯ್ಯನವರು ಗೌರವಯುತವಾದ ಪ್ರಭುದ್ಧ ಚಿಂತನೆ ಇರುವ ಸಿಎಂ. ಸಿಎಂ ಚಿಂತನೆ ಮಾಡಬೇಕು ನೀರನ್ನು ಬಿಡಬಾರದು. ಕರ್ನಾಟಕದಿಂದ ನೀರು ಬಿಡುತ್ತಾರೆ ಅಂತ ತಮಿಳುನಾಡು ಗದ್ದಲ ಮಾಡುತ್ತಿಲ್ಲ ಎಂದರು.
ಕರ್ನಾಟಕದಿಂದ ನೀರನ್ನ ಹಗಲು ರಾತ್ರಿ ಎನ್ನದೇ ಬಿಡುತ್ತಿದ್ದಾರೆ. ಈ ರಾಜ್ಯಕೋಸ್ಕರ ರೈತರಿಗೋಸ್ಕರ ಬೆಂಗಳೂರಿಗೋಸ್ಕರ ನಿಮ್ಮ ಕಾಲಿಗೆ ಬಿಳುತ್ತೇವೆ ನೀರು ಬಿಡಬೇಡಿ. ಕೆಂಗಲ ಹನುಮಂತಯ್ಯ, ನಿಜಲಿಂಗಪ್ಪ, ದೇವರಾಜು ಅರಸು ಅವರನ್ನು ನೋಡಿದ್ದೇನೆ. ಈ ಶಾಸನ ಸಭೆಗೂ ನನಗೂ 60 ವರ್ಷ ಸಂಬಂಧ ಇದೆ. ನಾನೂ 5 ಬಾರಿ ಶಾಸಕನಾಗಿ ಸೇವೆ ಸಲ್ಲಿಸಿದ್ದೇನೆ. ಕಬಿನಿ, ಕೆಆರ್ಎಸ್ ಮತ್ತು ಹಾರಂಗಿಯಲ್ಲಿ ನೀರಿಲ್ಲ. ಈ ಬಗ್ಗೆ ಪಾರ್ಲಿಮೆಂಟ್ ಸದಸ್ಯರು ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಊಟಿ, ಹೊಸುರು ನಮ್ಮದು: ವಾಟಾಳ್ ನಾಗರಾಜ್
ಚುನಾವಣೆ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷದವರು ಓಡಾಡಿದರು. ಈ ಬಗ್ಗೆ ಪ್ರಧಾನ ಮಂತ್ರಿ ಮಧ್ಯ ಪ್ರವೇಶಿಸಬೇಕು. ಸರ್ವ ಪಕ್ಷ ನಿಯೋಗ ಹೋಗಿ ಪ್ರಧಾನಿಯವರನ್ನು ಭೇಟಿ ಆಗಬೇಕು. ತುರ್ತು ಶಾಸನ ಸಭೆಯನ್ನ ಸಿಎಂ ಕರೆಯಬೇಕು. ನಾಳೆ ತಮಿಳುನಾಡಿನ ಹೊಸುರಿಗೆ ಹೋಗುತ್ತೇವೆ. ಬೆಳಿಗ್ಗೆ 11 ಗಂಟೆಗೆ ಹೊಸುರು ಪುರಸಭೆ ಮುಂದೆ ಭಾರಿ ಪ್ರತಿಭಟನೆ ಮಾಡುತ್ತೇವೆ. ಊಟಿ, ಹೊಸುರು ನಮ್ಮದು ಎಂದರು.
ಹಿಂದೂಸ್ತಾನ್ ಸಮಾಚಾರ್
