ದೆಹಲಿ, 29 ನವೆಂಬರ್ (ಹಿ.ಸ):
ಆ್ಯಂಕರ್ :
ಸಿಲ್ಕ್ಯಾರಾ ಸುರಂಗ ದಿಂದ ರಕ್ಷಿಸಲ್ಪಟ್ಟ 41 ಕಾರ್ಮಿಕರೊಂದಿಗೆ ದೂರವಾಣಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದರು. ಒಂದೇ ಕಡೆಯಿದ್ದ ಎಲ್ಲಾ ಕಾರ್ಮಿಕರ ಬಳಿ ಮಾತನಾಡಿ, ಆರೋಗ್ಯ ವಿಚಾರಿಸಿದರು. ನವೆಂಬರ್ 12 ರಂದು ಉತ್ತರ ಕಾಶಿಯ ಸಿಲ್ಕ್ಯಾರಾ ಸುರಂಗದ ಒಂದು ಭಾಗ ಕುಸಿದಿತ್ತು, ಅದರೊಳಗೆ 41 ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದರು. ಸತತ ಪ್ರಯತ್ನದ ಬಳಿಕ 17 ದಿನಗಳ ನಂತರ ಈ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಕಾರ್ಮಿಕರನ್ನು ಸ್ಥಳಾಂತರಿಸಿದ ಕೂಡಲೇ ಪ್ರಧಾನಿ ಮೋದಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ, ಉತ್ತರಕಾಶಿಯಲ್ಲಿ ಕಾರ್ಮಿಕ ಸಹೋದರರ ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಎಲ್ಲರನ್ನು ಭಾವುಕರನ್ನಾಗಿಸುತ್ತಿದೆ. ನಿಮ್ಮ ಧೈರ್ಯ ಹಾಗೂ ತಾಳ್ಮೆ ಎಲ್ಲರಿಗೂ ಸ್ಫೂರ್ತಿ, ನೀವೆಲ್ಲರೂ ದೀರ್ಘಕಾಲ ಆರೋಗ್ಯವಾಗಿರಿ. ದೀರ್ಘಾವಧಿಯ ಕಾಯುವಿಕೆಯ ಬಳಿಕ ನೀವು ನಿಮ್ಮ ಪ್ರೀತಿ ಪಾತ್ರರನ್ನು ಭೇಟಿಯಾಗಿರುವುದು ತುಂಬಾ ತೃಪ್ತಿದಾಯಕ ಸಂಗತಿ ಎಂದು ಬರೆದಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಕೇಂದ್ರ ಸಚಿವ ಜನರಲ್ (ನಿವೃತ್ತ) ವಿಕೆ ಸಿಂಗ್ ಅವರು 41 ಕಾರ್ಮಿಕರಿಗೆ ಹೂಮಾಲೆಯೊಂದಿಗೆ ಸ್ವಾಗತಿಸಿದರು, ಕೈಕುಲುಕಿದರು ಮತ್ತು ಅವರನ್ನು ಅಪ್ಪಿಕೊಂಡರು, ಆದರೆ ರಕ್ಷಣಾ ತಂಡಗಳು ಮತ್ತು ಅಧಿಕಾರಿಗಳು ಚಪ್ಪಾಳೆ ತಟ್ಟಿದರು.
ಸುರಂಗದಲ್ಲಿ ಸಿಲುಕಿದ್ದವರಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ 1 ಲಕ್ಷ ರೂ. ನೆರವು ಘೋಷಿಸಿದ್ದಾರೆ. ಈ ಮಧ್ಯೆ, ಕಾರ್ಮಿಕರ ರಕ್ಷಣೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಹರ್ಷ ವ್ಯಕ್ತಪಡಿಸಿದ್ದು, ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.
ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕ ಬಂಧುಗಳು ಸುರಕ್ಷಿತವಾಗಿ ವಾಪಸ್ ಬಂದಿರುವುದು ಸಂತಸದ ಸುದ್ದಿ. ಅವರಿಗೆ ಮತ್ತು ಅವರ ಕುಟುಂಬದವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
