
ಬೆಂಗಳೂರು , 15ನವೆಂಬರ್ (ಹಿ.ಸ):
ಆ್ಯಂಕರ್ :ಚುನಾವಣೆಯಲ್ಲಿ ಗೆಲ್ಲುವವರೆಗೆ ಮಾತ್ರ ಬಿಜೆಪಿ ಕಾರ್ಯಕರ್ತ, ಗೆದ್ದ ಬಳಿಕ ನಾನು ಆ ಜಾತಿ, ನಾನು ಈ ಜಾತಿ ಎಂಬ ಮನೋಭಾವನೆ ಬಿಟ್ಟು ಬಿಜೆಪಿ ಕಾರ್ಯಕರ್ತ ಅಂತ ಕೆಲಸ ಮಾಡಿದರೇ ನಿಶ್ಚಿತವಾಗಿ ಲೋಕಸಭಾ ಚುನಾವಣೆ ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಗೆಲ್ಲುವುದು ನಿಶ್ಚಿತ ಎಂದು ಬಿಜೆಪಿ ನೂತನ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ಕರೆಕೊಟ್ಟರು. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಉತ್ತರ ಕೊಡಬೇಕಾಗಿದೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯನ್ನೂ ನಾವು ಮರೆಯಬಾರದು. ಲೋಕಸಭಾ ಚುನಾವಣೆ ಅಂತಾ ಭಯ ಬೇಡ. ನಾವೇನೂ ಆಪರೇಷನ್ ಕಮಲ ಮಾಡುತ್ತಿಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಬಿಜೆಪಿ ರಾಜ್ಯದ ಜವಾಬ್ದಾರಿ ಇಂದು (ನ.15) ಹೊತ್ತುಕೊಂಡಿದ್ದೇನೆ. ಪಕ್ಷದ ಮುಖಂಡರು, ಸಂಘ ಪರಿವಾರದ ಮುಖಂಡರು ವಿಜಯೇಂದ್ರ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಹೋಗುತ್ತೇನೆ. ಶಿಕಾರಿಪುರ ತಾಲೂಕಿನ ಎಲ್ಲಾ ಹಿರಿಯರು, ಸಂಘಟನೆಯ ಮುಖಂಡರಿಗೆ ಧನ್ಯವಾದ ಹೇಳುತ್ತೇನೆ. ನನ್ನ ಹೆಸರು ಘೋಷಣೆ ಮಾಡಿದ ಮರುಕ್ಷಣದಿಂದ ಎಲ್ಲಾ ಹಿರಿಯರ ಜೊತೆ ವೈಯಕ್ತಿಕವಾಗಿ ಮಾತನಾಡುವ ಪ್ರಯತ್ನ ಮಾಡಿದ್ದೇನೆ. ಯಾರೂ ಬೇಸರದಲ್ಲಿ ಇಲ್ಲ, ಅದರ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಎಲ್ಲಾ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
28 ಲೋಕಸಭಾ ಕ್ಷೇತ್ರ ಗೆಲ್ಲುವುದೊಂದೇ ನಮ್ಮ ಗುರಿ. ಹಿಂದೆ 20 ಕ್ಷೇತ್ರ ಗೆಲ್ಲುತ್ತೇವೆ ಎಂದು ಬಿಎಸ್ ಯಡಿಯೂರಪ್ಪ ಅವರು ಹೇಳಿದಾಗ ಅವರ ಹೇಳಿಕೆಯನ್ನು ಹಾಸ್ಯ ಮಾಡಿದ್ದರು. ಲೋಕಸಭಾ ಚುನಾವಣೆಗೆ ಹಗಲು ರಾತ್ರಿ ಶ್ರಮ ಹಾಕಬೇಕಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ವಲ್ಪ ಹಿನ್ನೆಡೆ ಆಗಿದೆ ನಿಜ. ನನಗೆ ಜವಾಬ್ದಾರಿ ಕೊಟ್ಟಿದ್ದಾರೆ ಅಂದರೆ ಆ ಸ್ಥಾನದ ಮಹತ್ವ ಮತ್ತು ಗೌರವ ನನಗೆ ಗೊತ್ತಿದೆ. ಯಡಿಯೂರಪ್ಪನವರ ಹೋರಾಟವನ್ನು ಹತ್ತಿರದಿಂದ ನೋಡಿದ್ದೇನೆ. ನಮ್ಮ ಪಕ್ಷದ ಯಾರೂ ತಲೆ ತಗ್ಗಿಸಿಕೊಂಡು ಹೋಗಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.
ಹಿಂದೆ ನಮ್ಮ ಸರ್ಕಾರದ ಮೇಲೆ 40% ಸರ್ಕಾರ ಅಂತಾ ಆರೋಪ ಮಾಡಿದರು. ಅದನ್ನು ಹೇಳಲು ನನಗೆ ಯಾವುದೇ ಸಂಕೋಚ ಇಲ್ಲ. 40% ಆರೋಪವನ್ನು ಕಾಂಗ್ರೆಸ್ ಸರ್ಕಾರ ನಿಜ ಮಾಡುತ್ತಿದೆ. ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಬರಪೀಡಿತ ಜಿಲ್ಲೆಗಳಿಗೆ ಈವರೆಗೂ ಯಾವುದೇ ಸಚಿವರು ನೀಡಿಲ್ಲ. ಅಧಿಕಾರದ ಅಹಂ, ಗರ್ವದಿಂದ ಸಚಿವರು ಮೆರೆಯುತ್ತಿದ್ದಾರೆ. ಮುಂದೆ ಈ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಆಗಬೇಕು ಎಂದು ವಾಗ್ದಾಳಿ ಮಾಡಿದರು.
ಹಿಂದೂಸ್ತಾನ್ ಸಮಾಚಾರ್
