ಬೆಂಗಳೂರು, 08 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯವಿದ್ದು, ಅದು ಭಾರತದ ಪ್ರತಿಷ್ಠಿತ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಪೈಕಿ ಒಂದಾಗಿದೆ. ಶ್ರೀ ಕ್ಷೇತ್ರಕ್ಕೆ ವರ್ಷವಿಡಿ ಜಗತ್ತಿನೆಲ್ಲೆಡೆಯಿಂದ ಕೋಟ್ಯಾಂತರ ಭಕ್ತರು ಆಗಮಿಸಿ ತಮ್ಮ ಆರಾಧ್ಯ ದೇವರ ದರ್ಶನವನ್ನು ಪಡೆಯುತ್ತಾರೆ. ಧಾರ್ಮಿಕ ಕಾರ್ಯಗಳೇ ಕಲಿಯುಗದ ಶ್ರೀರಕ್ಷೆ ಎಂಬ ದಿವ್ಯವಾಣಿಗೆ ಅನುಸಾರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳವು ಕಳೆದ ಹಲವು ದಶಕಗಳಿಂದ ಸಹಸ್ರಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ, ನೂರಾರು ಧಾರ್ಮಿಕ ಕ್ಷೇತ್ರಗಳನ್ನು ಜೀರ್ಣೋದ್ದಾರಗೊಳಿಸುತ್ತಾ ಧರ್ಮ ದಾಸೋಹಕ್ಕೆ ಸಾಕ್ಷಿಯಾಗಿದೆ. ಇಷ್ಟು ಮಾತ್ರವಲ್ಲದೇ ಅಕ್ಷರ ಹಾಗೂ ಅನ್ನದಾಸೋಹಕ್ಕೂ ಆಣಿಯಾಗಿ ನಿಂತಿದೆ. ಧರ್ಮಕ್ಕೆ ಪ್ರತಿರೂಪವಾಗಿರುವ ಧರ್ಮಸ್ಥಳಕ್ಕೆ ಇಂದು ಪಟ್ಟಬದ್ಧ ಹಿತಾಸಕ್ತಿಗಳು ಹಾಗೂ ಹಿಂದೂ ವಿರೋಧಿ ಶಕ್ತಿಗಳು ವ್ಯಾಪಕವಾಗಿ ಅಪಪ್ರಚಾರವೆಸಗುತ್ತಾ ಕ್ಷೇತ್ರದ ಗೌರವ ಹಾಗೂ ಘನತೆಯನ್ನು ಕುಗ್ಗಿಸಲು ಯತ್ನಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ವಿಶ್ವ ಹಿಂದು ಪರಿಷತ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬೆಂಗಳೂರು ಪ್ರಾಂತ ಅಧ್ಯಕ್ಷ ದೀಪಕ್ ರಾಜ್ ಗೋಪಾಲ್ ಹಾಗೂ ನಿಕಟಪೂರ್ವ ಪ್ರಾಂತ ಅಧ್ಯಕ್ಷ ಡಾ ಎಂ ಬಿ ಪುರಾಣಿಕ್, ಬೆಳ್ತಂಗಡಿ ಪೋಲೀಸ್ ರಾಣೆ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿ 2012ರಲ್ಲಿ ನಡೆದ ಕುಮಾರಿ ಸೌಜನ್ಯಳ ಕ್ರೌರ್ಯಭರಿತ ಹತ್ಯೆಗೆ ಸಂಬಂಧಿಸಿ ಸಮಗ್ರವಾದ ಪಾರದರ್ಶಕ ತನಿಖೆ ನಡೆದು ಅಪರಾಧಿಗಳಿಗೆ ಕಠಿಣಾಧಿ ಕಠಿಣ ಶಿಕ್ಷೆಯಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತಲೇ ಬಂದಿದೆ. ಅಷ್ಟೇ ಅಲ್ಲದೆ ಅಂದಿನಿಂದಲೂ ಆ ನಿಟ್ಟಿನಲ್ಲಿ ನಡೆದ ಎಲ್ಲಾ ಪೂರ್ವಾಗ್ರಹರಹಿತ ಹೋರಾಟಗಳಿಗೆ ತನ್ನ ಬೆಂಬಲವನ್ನೂ ನೀಡಿದೆ. ಈ ನಡುವೆ ಇದೀಗ ಅನಾಮಿಕ ವ್ಯಕ್ತಿಯೊಬ್ಬ ತಾನು 10-20 ವರ್ಷಗಳ ಹಿಂದೆ ನೂರಾರು ಹೆಣಗಳನ್ನು ಧರ್ಮಸ್ಥಳದ ಕಾಡುಗಳಲ್ಲಿ ಹೂತಿದ್ದೇನೆ ಎಂಬ ಹೇಳಿಕೆಯನ್ನು ಆಧರಿಸಿ ಶ್ರೀ ಕ್ಷೇತ್ರದ ಘನತೆಗೆ ಹಾಗೂ ಹಿಂದೂ ಧಾರ್ಮಿಕ ನಂಬಿಕೆಗೆ ಚ್ಯುತಿ ತರುವ ಸಂಚನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಹಿಂದೂ ಧರ್ಮಕ್ಕೆ ಸೇರದ ಅನ್ಯಮತೀಯ ಸಂಘಟನೆಗಳ ಪ್ರಮುಖರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಾಹಿನಿ ನಡೆಸುವವರು ಧರ್ಮಸ್ಥಳದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವುದನ್ನು ನೋಡಿದಾಗ ಇದೊಂದು ಬಹು ದೊಡ್ಡ ಪಡ್ಯಂತ್ರವೆಂಬುದು ಕಂಡುಬರುತ್ತಿದೆ. ಮಾತ್ರವಲ್ಲದೇ ಇದನ್ನು ಅಂತರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಭಿತ್ತರಿಸುವ ಮೂಲಕ ಇದೊಂದು ಅಂತರಾಷ್ಟ್ರೀಯ ಮಟ್ಟದ ಪಿತೂರಿ ಎಂದು ಹಿಂದೂ ವಿರೋಧಿ ಶಕ್ತಿಗಳು ಸಾಬೀತು ಪಡಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ – ಸಮಗ್ರ ತನಿಖೆಗೆ ಸರಕಾರಕ್ಕೆ ಆಗ್ರಹ : ರಾಜ್ಯ ಸರಕಾರವು ಎಸ್ಐಟಿ ಮೂಲಕ ತನಿಖೆಯನ್ನು ಮುಂದುವರಿಸುವಾಗ ಶ್ರೀ ಕ್ಷೇತ್ರ ಧರ್ಮಸ್ಥಳದ ಘನತೆ ಮತ್ತು ಹಿಂದೂ ಶ್ರದ್ಧೆ – ಭಾವನೆ ನಂಬಿಕೆಗಳಿಗೆ ಅಪಚಾರವಾಗದೇ ಇರುವ ರೀತಿಯಲ್ಲಿ ಎಚ್ಚರಿಕೆ ವಹಿಸುವಂತೆ ಹಾಗೂ ಶ್ರೀ ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡಿ ಸನಾತನ ಧರ್ಮದೊಳಗೆ ಬಿರುಕು ಮೂಡಿಸಲು ಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿ ಎಚ್ ಪಿ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ನಿಲುವು ಸ್ಪಷ್ಟವಿದೆ, ಇತ್ತೀಚಿಗೆ ನಡೆಯುತ್ತಿರುವ ಎಲ್ಲಾ ಘಟನೆಗಳ ಸಮಗ್ರ ತನಿಖೆಯಾಗಬೇಕಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಆದರೆ ಧರ್ಮಸ್ಥಳದಂತಹ ಶ್ರದ್ಧಾಕೇಂದ್ರದ ಘನತೆ ಗೌರವಗಳಿಗೆ ಯಾವುದೇ ಹಾನಿಯಾಗಬಾರದು. ಧರ್ಮಸ್ಥಳ ಮಾತ್ರವಲ್ಲದೆ ರಾಜ್ಯ ಹಾಗು ದೇಶದ ಇನ್ನೂ ಆನೇಕ ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧ ಪಿತೂರಿ ಮಾಡುವ ಎಲ್ಲಾ ಅಹಿಂದ- ಅಂತಾರಾಷ್ಟ್ರೀಯ ಶಕ್ತಿಗಳ ವಿರುದ್ಧ ವಿಶ್ವ ಹಿಂದು ಪರಿಷತ್ ಎಲ್ಲಾ ರೀತಿಯ ಹೋರಾಟ ಮಾಡಲು ಸಿದ್ಧವಿದೆ ಎಂದು ಉಭಯ ನಾಯಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
