ಹೊಸಪೇಟೆ, 22 ಜನವರಿ(ಹಿ.ಸ):
ಆ್ಯಂಕರ್: ಭಾರತ ಸಂವಿಧಾನ ಅಂಗೀಕೃತಗೊಂಡ ಅಮೃತ ಮಹೋತ್ಸವ ಸವಿನೆನಪಿಗಾಗಿ ಸರ್ಕಾರದ ನಿರ್ದೇಶನದಂತೆ ಜನವರಿ 26ರಿಂದ ವಿಜಯನಗರ ಜಿಲ್ಲಾದ್ಯಂತ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನದ ಮೂಲಕ ಸಾರ್ವಜನಿಕರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕು.
ಸಾಮಾಜಿಕ ನ್ಯಾಯ, ಸೌಹಾರ್ಧತೆ, ಭಾತೃತ್ವ ಹಾಗೂ ಸಾಮಾಜಿಕ ಸಂದೇಶಗಳನ್ನು ಎಲ್ಲಾ ವರ್ಗದ ಮನೆ-ಮನಗಳಿಗೆ ಕೊಂಡೋಯ್ಯುವ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಇಂಬು ಕೊಡಬೇಕು ಎಂಬುದು ಸರ್ಕಾರದ ನಿರ್ದೇಶನವಾಗಿದೆ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾದ್ಯಂತ ಸಂಚರಿಸುವ ಸಂವಿಧಾನ ಜಾಗೃತಿಯ ವಾಹನಕ್ಕೆ ಆಯಾ ಕಡೆಗೆ ಸಂಭ್ರಮದಿಂದ ಬರ ಮಾಡಿಕೊಳ್ಳಬೇಕು. ಶಿಷ್ಠಾಚಾರ ಪಾಲನೆ ಮಾಡಬೇಕು. ಪ್ರತಿಯೊಂದು ಗ್ರಾಮ, ಹೋಬಳಿ ಸೇರಿದಂತೆ ಎಲ್ಲಾ ಕಡೆಗೆ ಹಬ್ಬದ ಸಂಭ್ರಮ ಕಾಣುವ ಹಾಗೆ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಆಯಾ ಗ್ರಾಮ ಪಂಚಾಯಿತಿ ಕೇಂದ್ರ, ಹೋಬಳಿ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಚಿಂತಕರು, ಸಾಹಿತಿಗಳು, ವಾಗ್ಮಿಗಳು ಹಾಗೂ ಡಾ.ಅಂಬೇಡ್ಕರ ಅವರ ಬಗ್ಗೆ ಆಳವಾದ ಅಧ್ಯಯನ ಮಾಡಿರುವವರಿಗೆ ಆಹ್ವಾನ ನೀಡಿ ಅವರಿಂದ ಸಂವಿಧಾನದ ಬಗ್ಗೆ ಭಾಷಣ ಏರ್ಪಡಿಸಬೇಕು. ಜಾಥಾ ಅಂಗವಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಚಿತ್ರ ರಚನೆ, ಪ್ರಬಂಧ ಸ್ಪರ್ಧೆ ಮುಂತಾದವುಗಳನ್ನು ಜಾಥಾ ಬರುವ ಹಿಂದಿನ ದಿನವೇ ಆಯೋಜಿಸಿ ಉತ್ತೇಜನೆ ನೀಡಲು ಕ್ರಮ ವಹಿಸಬೇಕು ಎಂದರು.
ಜಾಥಾ ಸಾಗುವ ಗ್ರಾಮಗಳ ಎಲ್ಲಾ ಮನೆಗಳಿಗೂ ಸಂವಿಧಾನ ಪೀಠಿಕೆಯ ಕಾರ್ಡಗಳನ್ನು ನೀಡುವ ಮೂಲಕ ಸಂವಿಧಾನ ಪೀಠಿಕೆ ಎಲ್ಲರನ್ನೂ ತಲುಪುವಂತೆ ನೋಡಿಕೊಳ್ಳಬೇಕು. ಬಾಬಾ ಸಾಹೇಬರ ಅಪರೂಪದ ಚಿತ್ರಗಳು, ವಿಡಿಯೋ ತುಣುಕುಗಳು, ಸಂವಿಧಾನ ರಚನಾ ಸಭೆಯಲ್ಲಿ ನಡೆಸಿರುವ ಚರ್ಚೆಗಳ ವಿಡಿಯೋಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸದಾಶಿವ ಪ್ರಭು ಬಿ., ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ., ಸಹಾಯಕ ಆಯುಕ್ತರಾದ ಮಹದ್ ಅಲಿ ಅಕ್ರಮ ಷಾಹ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಇನ್ನೀತರರು ಇದ್ದರು.
