ಬೆಂಗಳೂರು, 01 ಜನವರಿ (ಹಿ.ಸ.) :
ಆ್ಯಂಕರ್ : ಬೆಂಗಳೂರು ಜಿಬಿಎ ವ್ಯಾಪ್ತಿಯ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿ ವಾಸಿಸುತ್ತಿದ್ದವರನ್ನು ಕಾನೂನಾತ್ಮಕವಾಗಿ ಸರ್ಕಾರ ತೆರವುಗೊಳಿಸಿರುವುದು ಸ್ವಾಗತಾರ್ಹ. ಆದರೆ, ತೆರವು ಕಾರ್ಯಾಚರಣೆಯ ನಂತರ “ಅನುಕಂಪದ ಆಧಾರ”ದಲ್ಲಿ ನಿರಾಶ್ರಿತರಿಗೆ ಸರ್ಕಾರವೇ ಮನೆಗಳನ್ನು ನೀಡುವ ನಿರ್ಧಾರ ಎಷ್ಟರ ಮಟ್ಟಿಗೆ ನ್ಯಾಯಸಮ್ಮತ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಶ್ನಿಸಿದೆ.
ರಾಜ್ಯದಲ್ಲಿ ಅನೇಕ ವರ್ಷಗಳಿಂದ ಕಾನೂನುಬದ್ಧವಾಗಿ ಮನೆ ಹಕ್ಕುಪತ್ರಗಳು ಹಾಗೂ ನಿವೇಶನಗಳಿಗಾಗಿ ವಿವಿಧ ಸರ್ಕಾರಿ ನಿಗಮಗಳ ಮೂಲಕ ಅರ್ಜಿ ಸಲ್ಲಿಸಿರುವ ಸಾವಿರಾರು ಅರ್ಹ ನಾಗರಿಕರ ಬಗ್ಗೆ ಸರ್ಕಾರದ ನಿಲುವೇನು ಎಂಬುದು ಈ ಸಂದರ್ಭದಲ್ಲಿ ಸ್ಪಷ್ಟವಾಗಬೇಕು. ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವವರಲ್ಲಿ ಹೆಚ್ಚಿನವರು ವಲಸಿಗರು; ಅದರಲ್ಲೂ ಅಕ್ರಮ ಬಾಂಗ್ಲಾ ವಲಸಿಗರ ಪ್ರಮಾಣ ಹೆಚ್ಚು ಎನ್ನುವ ಆರೋಪಗಳು ಗಂಭೀರ ಚಿಂತೆಗೆ ಕಾರಣವಾಗಿವೆ. ಇಂತಹ ಅಕ್ರಮ ವಲಸೆಯು ರಾಜ್ಯದ ಭದ್ರತೆಗೆ ಆತಂಕಕಾರಿಯಾಗಿದೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ, ಅತ್ಯಾಚಾರ, ಕೊಲೆ ಹಾಗೂ ಸುಲಿಗೆಗಳ ಹಿನ್ನೆಲೆಯಲ್ಲಿ, ಅಕ್ರಮವಾಗಿ ಪ್ರವೇಶಿಸಿರುವ ವಲಸಿಗರಿಂದ ಮುಂದಿನ ದಿನಗಳಲ್ಲಿ ಕಾನೂನು-ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಯನ್ನು ನಿರ್ಲಕ್ಷಿಸಲಾಗದು.
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಅಧಿಕಾರದ ವ್ಯಾಮೋಹದಿಂದ ಅತಿಯಾದ ಮುಸ್ಲಿಂ ತುಷ್ಟಿಕರಣದ ರಾಜಕಾರಣವನ್ನು ಅನುಸರಿಸುತ್ತಿದೆ ಎಂಬ ಆರೋಪಗಳು ಈಗಾಗಲೇ ಸಾರ್ವಜನಿಕ ಚರ್ಚೆಯ ವಿಷಯವಾಗಿವೆ. ಮತಬ್ಯಾಂಕ್ ರಾಜಕಾರಣಕ್ಕಾಗಿ ರಾಷ್ಟ್ರದ ಸುರಕ್ಷತೆ ಮತ್ತು ಏಕತೆಯನ್ನು ಲೆಕ್ಕಿಸದೇ ಇಂತಹ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂಬ ಆಕ್ರೋಶ ಬಹುಸಂಖ್ಯಾತ ಸಮುದಾಯದಲ್ಲಿ ವ್ಯಕ್ತವಾಗಿದೆ.
ಕೋಗಿಲು ಬಡಾವಣೆಯ ಫಕೀರ್ ಲೇಔಟ್ ಮತ್ತು ವಾಸಿಂ ಲೇಔಟ್ಗಳನ್ನು ನಿರ್ಮಿಸಿದವರು ಯಾರು ಎಂಬ ಪ್ರಶ್ನೆಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು. ಸ್ಥಳೀಯ ಮುಸ್ಲಿಂ ಮುಖಂಡರೊಬ್ಬರು ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಈ ಬಡಾವಣೆಗಳನ್ನು ನಿರ್ಮಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇಂತಹ ಬೆಳವಣಿಗೆಗಳು ರಾಜ್ಯದ ಅಖಂಡತೆ, ಏಕತೆ ಮತ್ತು ಭದ್ರತೆಗೆ ಗಂಭೀರ ಆತಂಕವನ್ನುಂಟುಮಾಡುತ್ತವೆ.
ಈಗಾಗಲೇ ಕೋಗಿಲು ಬಡಾವಣೆಯಲ್ಲಿ ವಾಸಿಸುತ್ತಿದ್ದ 180ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಕುಟುಂಬಗಳಿಗೆ ಅನುಕಂಪದ ಆಧಾರದ ಮೇಲೆ ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಸರ್ಕಾರ ಭರವಸೆ ನೀಡಿರುವುದು ಸಂಶಯಾಸ್ಪದವಾಗಿದೆ. ಅಕ್ರಮ ವಲಸಿಗರಿಗೆ, ಅದರಲ್ಲೂ ಅಕ್ರಮ ಬಾಂಗ್ಲಾ ವಲಸಿಗರಿಗೆ ಸೂರು ಕಲ್ಪಿಸುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂಬ ಅನುಮಾನವನ್ನು ಇದು ಬಲಪಡಿಸುತ್ತದೆ. ಅಲ್ಪಸಂಖ್ಯಾತ ಇಲಾಖೆಯ ಸಚಿವರು “ಯಾವುದೇ ರೀತಿಯಲ್ಲಿ ಮನೆ ಕಟ್ಟಿಕೊಡುತ್ತೇವೆ” ಎಂಬ ಹೇಳಿಕೆಗಳು ಸರ್ಕಾರದ ತುಷ್ಟಿಕರಣದ ಮನೋಭಾವವನ್ನು ತೋರಿಸುತ್ತವೆ.
ಆದ್ದರಿಂದ, ಸರ್ಕಾರವು ಈ ನಿರ್ಧಾರದಿಂದ ತಕ್ಷಣ ಹಿಂದೆ ಸರಿಯಬೇಕು ಎಂದು ಹಿಂದು ಜಾಗರಣ ವೇದಿಕೆ ಆಗ್ರಹಿಸುತ್ತದೆ. ಇಲ್ಲವಾದಲ್ಲಿ, ಮುಂದಿನ ದಿನಗಳಲ್ಲಿ ಜನಾಂದೋಲನ ರೂಪಿಸಿ ಸರ್ಕಾರದ ಕ್ರಮಗಳ ವಿರುದ್ಧ ಹೋರಾಟವನ್ನು ಸಂಘಟನೆಯು ಕೈಗೊಳ್ಳಲಿದೆ.
ಇದಲ್ಲದೆ, ಬೆಂಗಳೂರಿನಲ್ಲಿ ಹಕ್ಕುಪತ್ರಗಳಿಗಾಗಿ ಅರ್ಜಿ ಸಲ್ಲಿಸಿರುವ ಸಾವಿರಾರು ನಿರಾಶ್ರಿತ ಅರ್ಹ ಹಿಂದೂ ಕುಟುಂಬಗಳನ್ನು ಒಗ್ಗೂಡಿಸಿ ಪ್ರತಿಭಟನೆಗಳನ್ನು ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಈ ಮೂಲಕ ನೀಡಲಾಗುತ್ತಿದೆ. ಸರ್ಕಾರವು ತನ್ನ ನಿರ್ಧಾರವನ್ನು ಮರುಪರಿಶೀಲಿಸಿ, ಕಾನೂನಿನ ಅಡಿಯಲ್ಲಿ ನಿಜವಾಗಿಯೂ ಅರ್ಹರಾದವರಿಗೆ ಮಾತ್ರ ಸೂರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಹಿಂದೂ ಜಾಗರಣ ವೇದಿಕೆಯ ಬೆಂಗಳೂರು ಮಹಾನಗರ ಸಂಚಾಲಕ ರಾಜಣ್ಣ ಹೊನ್ನೇನಹಳ್ಳಿ ಹಾಗೂ ಪ್ರಾಂತ ಸಂಚಾಲಕ ದೋ. ಕೇಶವಮೂರ್ತಿ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
