ಬೆಂಗಳೂರು, 17 ಡಿಸೆಂಬರ್(ಹಿ.ಸ):
ಆ್ಯಂಕರ್ :
ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯಭೂಮಿಗಾಗಿ ಅಭಿಮಾನಿಗಳು ಹೋರಾಟಕ್ಕೆ ಮುಂದಾಗಿದ್ದಾರೆ. ವಿಷ್ಣು ಅಭಿಮಾನಿಗಳ ಬೆಂಬಲಕ್ಕೆ ಕಿಚ್ಚ ಸುದೀಪ್ ನಿಂತಿದ್ದಾರೆ. ವಿಷ್ಣು ಸಮಾಧಿ, ಸ್ಮಾರಕ ವಿಚಾರವಾಗಿ ಕಿಚ್ಚ ಸುದೀಪ್ ತಡರಾತ್ರಿ ಟ್ವೀಟ್ ಮಾಡಿದ್ದಾರೆ.
ಡಾ.ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು-ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ ಎಂದು ಎಕ್ಸ್ನಲ್ಲಿ ಸುದೀಪ್ ಪೋಸ್ಟ್ ಹಾಕಿದ್ದಾರೆ.
ಶನಿವಾರ ತಡರಾತ್ರಿ 12:40 ಕ್ಕೆ ಸುದೀಪ್ ಈ ಪೋಸ್ಟ್ ಹಾಕಿದ್ದಾರೆ. ಆ ಮೂಲಕ ವಿಷ್ಣುವರ್ಧನ್ ಅಭಿಮಾನಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ವಿಷ್ಣುವರ್ಧನ್ ಪುಣ್ಯಭೂಮಿ ವಿಚಾರವಾಗಿ ಮಾತನಾಡಲು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಗೂ ಸುದೀಪ್ ಮುಂದಾಗಿದ್ದಾರೆ ಎನ್ನಲಾಗಿದೆ.
ವಿಷ್ಣುವರ್ಧನ್ ಪುಣ್ಯಭೂಮಿಗಾಗಿ ಅಭಿಮಾನಿಗಳು ಹೋರಾಟಕ್ಕೆ ಮುಂದಾಗಿದ್ದಾರೆ. ವಿಷ್ಣುಸೇನಾ ಸಮಿತಿಯಿಂದ ಹೋರಾಟಕ್ಕೆ ಕರೆ ನೀಡಿದ್ದು, ಫ್ರೀಡಂ ಪಾರ್ಕ್ನಲ್ಲಿ 10 ಗಂಟೆಗೆ ವಿಷ್ಣು ಅಭಿಮಾನಿಗಳು ಒಟ್ಟಾಗಿ ಸೇರಲಿದ್ದಾರೆ.
ಸಾವಿರಾರು ಜನ ಸೇರುವ ನಿರೀಕ್ಷೆ ಇದೆ. ಸುಮಾರು 40 ಕನ್ನಡಪರ ಸಂಘಟನೆಗಳು ಜೊತೆಯಾಗಲಿದೆ. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
