
ಕಾರವಾರ, 29 ನವೆಂಬರ್ (ಹಿ.ಸ):
ಆ್ಯಂಕರ್ :
ಉತ್ತರಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಶಿರಸಿ ತಹಶೀಲ್ದಾರ್ ಕಚೇರಿ ಮುಂಭಾಗ ಹಮ್ಮಿಕೊಂಡ 7 ದಿನಗಳ ಧರಣಿ ಸತ್ಯಾಗ್ರಹವು ಇಂದು ಬುಧುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಅನಂತಮೂರ್ತಿ ಹೆಗಡೆಯವರ ಹೋರಾಟಕ್ಕೆ ಗಣ್ಯರು ಹಾಗೂ ಜನಸಾಮಾನ್ಯರಿಂದ ಉತ್ತಮ ಬೆಂಬಲ ದೊರಕುತ್ತಿದ್ದು, ಜನರ ರಕ್ಷಣೆಗಾಗಿ ಆಸ್ಪತ್ರೆಯ ನಿರ್ಮಾಣದ ಬೇಡಿಕೆಯ ಕೂಗು ಜೋರಾಗಿದೆ.
ಸೋಮವಾರ ಜನ ಬೆಂಬಲದೊಂದಿಗೆ ಮೆರವಣಿಗೆಯಲ್ಲಿ ಸಾಗಿ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದು, 7 ದಿನಗಳ ಕಾಲ ಹೋರಾಟ ನಡೆಸುವುದಾಗಿ ಘೋಷಣೆ ಮಾಡಿದ್ದರು. ತಮ್ಮ ಸತ್ಯಾಗ್ರಹದ ಎರಡನೇ ದಿನ ಜನರನ್ನುದ್ದೇಶಿಸಿ ಮಾತನಾಡಿದ ಅನಂತಮೂರ್ತಿ ಹೆಗಡೆ ಅವರು, ನಮಗೆ ಆಸ್ಪತ್ರೆ ನೀಡಿ ಜೀವ ಉಳಿಸಿ. ಇದು ಉತ್ತರಕನ್ನಡ ಜಿಲ್ಲೆಯ ಜನರ ಸ್ವಾಭಿಮಾನದ ಹೋರಾಟ. ಘಟ್ಟದ ಮೇಲೊಂದು ,ಘಟ್ಟದ ಕೆಳಗೊಂದು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಗಲೇಬೇಕು ಎನ್ನುವುದು ನಮ್ಮ ಕೂಗು. ನಮ್ಮದು ಈಗ ಶಾಂತಿಯುತ ಹೋರಾಟ, ಸರ್ಕಾರ ಆದಷ್ಟೂ ಬೇಗ ನಮಗೆ ಆಸ್ಪತ್ರೆ ನೀಡಲೇಬೇಕು, ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದ ಅವರು, ಪ್ರತಿಯೊಬ್ಬರು ಕೂಡಾ ಈ ಹೋರಾಟದಲ್ಲಿ ಭಾಗವಹಿಸಲು ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್
