ಕೊಪ್ಪಳ, 11 ಜನವರಿ(ಹಿ.ಸ):
ಆ್ಯಂಕರ್ : ಕೊಪ್ಪಳ ಜಿಲ್ಲೆಯ ಹಿಟ್ನಾಳ ಗ್ರಾಮದ ಪ್ರತಿಭಾವಂತ ಬರಹಗಾರ್ತಿ, ಹೋರಾಟಗಾರ್ತಿ, ರಂಗಕರ್ಮಿ ಜ್ಯೋತಿ ಇ. ಹಿಟ್ನಾಳ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟವು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಹಯೋಗದಲ್ಲಿ ನೀಡುತ್ತಿರುವ ಪ್ರತಿಷ್ಠಿತ ರಾಜ್ಯ ಯುವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಮೂಲತಃ ಕೃಷಿಕರಾದ ಭೀಮಲಿಂಗಪ್ಪ ಮತ್ತು ಗೀತಮ್ಮ ರವರ ಮಗಳಾದ ಕುಮಾರಿ ಜ್ಯೋತಿ ಇ. ಹಿಟ್ನಾಳ್ ಪ್ರಸ್ತುತ ಬೆಂಗಳೂರಿನಲ್ಲಿ ತರಬೇತುದಾರರಾಗಿ ಕರ್ನಾಟಕದ ಹಲವು ಸಂಘ-ಸಂಸ್ಥೆಗಳಲ್ಲಿ, ಶಾಲಾ, ಕಾಲೇಜು, ಮಹಿಳೆಯರು ಮಕ್ಕಳ ಮತ್ತು ಯುವಜನರ ಜೊತೆಯಲ್ಲಿ ಲಿಂಗ ತಾರತಮ್ಯ, ಮಾನವ ಹಕ್ಕು, ಮಕ್ಕಳ ಹಕ್ಕು, ಯುವಜನರ ಹಕ್ಕು, ಮುಟ್ಟು, ಆರೋಗ್ಯ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯಗಳ ಕಾನೂನಿನ ಅರಿವು ಮೂಡಿಸುತ್ತಿದ್ದಾರೆ.
ಬಾಲ್ಯವಿವಾಹ, ಏಡ್ಸ್, ತಾರತಮ್ಯ, ಕೌಟುಂಬಿಕ ದೌರ್ಜನ್ಯ, ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಬೀದಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮಹಿಳೆಯರ ಮೇಲಾಗುವ ಕೌಟುಂಬಿಕ ದೌರ್ಜನ್ಯದ ಬಗ್ಗೆ 1500 ಕ್ಕೂ ಹೆಚ್ಚು ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ 1000ಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ. ಕರ್ನಾಟಕ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಅಧ್ಯಯನದಲ್ಲಿ ವರದಿಗಾರಳಾಗಿ ಕೆಲಸ ಮಾಡಿದ್ದಾರೆ.
2020 ರಲ್ಲಿ ಇವರು ಸಂಪಾದಿಸಿರುವ ಮುಟ್ಟು ಏನಿದರ ಒಳಗುಟ್ಟು ಎಂಬ ಪುಸ್ತಕದಲ್ಲಿ ಹೆಂಗಸರು ಮತ್ತು ಗಂಡಸರು ಮುಟ್ಟಿನ ವಿಚಾರವಾಗಿ ಮುಕ್ತವಾಗಿ ಮಾತನಾಡಿದ ಕರ್ನಾಟಕದ ಮೊದಲ ಪುಸ್ತಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪುಸ್ತಕವು ಕೇಂದ್ರ ಸರ್ಕಾರ ಸಾರ್ವಜನಿಕ ಲೈಬ್ರರಿಗಾಗಿ ಆಯ್ಕೆಯಾಗಿದೆ, ಇದೇ ವಿಷಯದಲ್ಲಿ ಹಂಪಿ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ ಯನ್ನೂ ಮಾಡುತ್ತಿದ್ದಾರೆ.
2023 ರಲ್ಲಿ ಮುಟ್ಟು ಮತ್ತು ಆರೋಗ್ಯ ಎಂಬ ಪುಸ್ತಕವನ್ನು ಯುವಜನರಿಗೆ ಹಾಗೂ ಮಹಿಳೆಯರಿಗೆ ಮಾಹಿತಿ ಕೈಪಿಡಿಯಾಗಿ ಹೊರತಂದಿದ್ದಾರೆ. ರಂಗನಿರಂತರ ಸಿ.ಜಿ.ಕೆ. ರಾಷ್ಟ್ರೀಯ ನಾಟಕ ರಂಗೋತ್ಸವ ಬೆಂಗಳೂರು ಇವರಿಂದ ಯುವ ರಂಗ ವಸಂತ ಗೌರವ ಪ್ರಶಸ್ತಿಯನ್ನು, 2024ರ ಸಾಲಿನ ದಲಿತ ವಿದ್ಯಾರ್ಥಿ ಪರಿಷತ್ ಕೊಡಮಾಡುವ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಪಡೆದಿರುವ ಇವರಿಗೆ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಸೂಡಿಮುಳ್ಳ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಯುವ ಪ್ರಶಸ್ತಿಯನ್ನು 2024ರ ಜನೇವರಿ 20 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರಿನಲ್ಲಿ ಪ್ರದಾನ ಮಾಡಲಾಗುವದು ಎಂದು ತಿಳಿಸಿದ್ದಾರೆ. ರಾಜ್ಯದ 31 ಜಿಲ್ಲೆಯ ಯುವಜನರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿದ್ದು ಅನೇಕ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
