ದೆಹಲಿ, 22 ಜನವರಿ(ಹಿ.ಸ):
ಆ್ಯಂಕರ್ :ಭಾರತೀಯರ ದಶಕಗಳ ಕನಸು ಇಂದು ಸಾಕಾರಗೊಂಡಿದ್ದು, ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಭ್ರಮಾಚರಣೆಗಳೊಂದಿಗೆ ನೆರವೇರಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ನಿಗದಿಯಾಗಿದ್ದ ಶುಭಅಭಿಜಿನ್ ಮುಹೂರ್ತದಲ್ಲಿ ರಾಮಲಲ್ಲಾನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ಚಿನ್ನ, ವಜ್ರವೈಡೂರ್ಯಗಳ ಆಭರಣಗಳಿಂದ ಅಲಂಕೃತಗೊಂಡಿದ್ದ ರಾಮಲಲ್ಲಾ ವಿರಾಜಮಾನ ಮೂರ್ತಿ ಕಣ್ಮನ ಸೆಳೆಯುತ್ತಿತ್ತು. ಗರ್ಭಗುಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲರಾದ ಆನಂದಿಬೆನ್, ಆರ್ಎಸ್ಎಸ್ ನ ಸರಸಂಘ ಚಾಲಕರಾದ ಮೋಹನ್ ಭಾಗವತ್, ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೇರಿದಂತೆ ಕೆಲವೇ ಮಂದಿ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾದರು. ದೇಶದ ವಿವಿಧ ಕ್ಷೇತ್ರಗಳ ಗಣ್ಯರನ್ನು ಈ ಸಮಾರಂಭಕ್ಕೆ ಆಹ್ವಾನಿಲಾಗಿತ್ತು. ಉದ್ಯಮಿಗಳಾದ ಸುನೀಲ್ ಮಿಥಲ್, ಅನಿಲ್ ಅಂಬಾನಿ, ಚಲನಚಿತ್ರ ನಟರಾದ ಅಮಿತಾಬ್ ಬಚ್ಚನ್, ರಜನೀಕಾಂತ್, ರಣಬೀರ್ ಕಪೂರ್, ಚಿರಂಜೀವಿ, ಮಾಧುರಿ ದೀಕ್ಷಿತ್, ಕತ್ರಿನಾಕೈಫ್, ಅಲಿಯಾಭಟ್, ಕಂಗನಾ ರಣಾವತ್, ರಿಷಬ್ ಶೆಟ್ಟಿ, ಕ್ರಿಡಾಪಟುಗಳಾದ ಸಚಿನ್ ತೆಂಡ್ಲೂಲ್ಕರ್, ಅನಿಲ್ ಕುಂಬ್ಳೆ, ಸೈನಾ ನೆಹ್ವಾಲ್, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು.
ದೇಶದ ಹಲವು ಮಠಮಾನ್ಯಗಳ ಸ್ವಾಮೀಜಿಗಳು, ಗಣ್ಯರು ಕಾರ್ಯಕ್ರಮವನ್ನು ಸಾಕ್ಷೀಕರಿಸಿದರು. ಪ್ರಾಣ ಪ್ರತಿಷ್ಠಾಪನಾ ಕಾರ್ಯದಲ್ಲಿ ಯಜಮಾನತ್ವ ವಹಿಸಿದ ಪ್ರಧಾನಿ ನರೇಂದ್ರ ಮೋದಿ, ಬಳಿಕ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು. ಭಾರತೀಯರ ದಶಕಗಳ ಕನಸು ಸಾಕಾರಗೊಂಡಿದ್ದಕ್ಕೆ ಧನ್ಯತಾಭಾವ ವ್ಯಕ್ತಪಡಿಸಿದ ಪ್ರಧಾನಮಂತ್ರಿ, ಹಲವಾರು ಕರಸೇವಕರ ತ್ಯಾಗ, ಬಲಿದಾನದ ಫಲವಾಗಿ ರಾಮಮಂದಿರ ಇಂದು ಸಾಕಾರಗೊಂಡಿದೆ ಎಂದರು. ಈ ಕ್ಷಣ ಅಲೌಕಿಕವಾಗಿದೆ. ರಾಮಲಲ್ಲಾನ ಆಶೀರ್ವಾದದ ಫಲವಾಗಿದೆ. ಈದಿನ ಹೊಸ ಕಾಲಚಕ್ರದ ಆರಂಭ ಎಂದು ಹೇಳಿದರು. ಎಲ್ಲಿ ರಾಮ ಕಾರ್ಯವಾಗಬೇಕೊ ಅಲ್ಲಿ ಹನುಮನ ಉಪಸ್ಥಿತಿ ಇರುತ್ತದೆ. ದೈವ ಸಂಕಲ್ಪದಿಂದಾಗಿ ಈ ಕಾರ್ಯ ನೆರವೇರಿದೆ ಎಂದರು. ರಾಮಮಂದಿರ ನಿರ್ಮಾಣಕ್ಕೆ ಇಷ್ಟು ಕಾಲವಾಗಿದ್ದಕ್ಕೆ ರಾಮನ ಕ್ಷಮೆಯಾಚಿಸುವುದಾಗಿ ಹೇಳಿದರು. ಭಾರತ ಸಂವಿಧಾನದ ಪ್ರಥಮ ಪುಟದಲ್ಲೇ ರಾಮನ ಚಿತ್ರವಿದೆ. ರಾಮಮಂದಿರವಾಗಿ ನ್ಯಾಯ ಒದಗಿಸಿದ ನ್ಯಾಯಾಲಕ್ಕೂ ಧನ್ಯಾವಾದ ಅರ್ಪಿಸುವುದಾಗಿ ನುಡಿದರು. ಇಂದು ಪ್ರತಿ ಮನೆಯಲ್ಲೂ ರಾಮಜ್ಯೋತಿ ಬೆಳಗಿ, ದೀಪಾವಳಿ ಆಚರಣೆ ಆಗಲಿದೆ. ರಾಮ ಚರಣ ಸ್ಪರ್ಶವಾಗಿದ್ದ ಪ್ರದೇಶಗಳಿಗೆ ತಾವು ಭೇಟಿ ನೀಡಿದ್ದನ್ನು ಸ್ಮರಿಸಿದ ಪ್ರಧಾನಿ, ಶ್ರೀರಾಮ ಭಾರತೀಯರ ಅಂತರ್ಮನದಲ್ಲಿ ಸ್ಥಾಪಿತವಾಗಿದ್ದಾರೆ ಎಂದು ಹೇಳಿದರು. ದೇಶವನ್ನು ಒಂದು ಸೂತ್ರದಲ್ಲಿ ಒಗ್ಗೂಡಿಸಲು ಇದಕ್ಕಿಂತ ಉತ್ತಮವಾಗಿದ್ದು ಮತ್ತೊಂದಿಲ್ಲ ಎಂದರು. ರಾಮನ ಆದರ್ಶಗಳು ಎಲ್ಲೆಡೆ ಒಂದೆಯಾಗಿದೆ ಎಂದು ಪ್ರಧಾನಿ, ಅಲ್ಪಸಂಖ್ಯಾತ ಕರಸೇವಕರ ಬಲಿದಾನಕ್ಕೆ ನಾವೆಲ್ಲರೂ ಋಣಿಯಾಗಿದ್ದೇವೆ. ಇದು ಕೇವಲ ವಿಜಯದ ಕ್ಷಣವಲ್ಲ, ವಿನಯದ ಕ್ಷಣವೂ ಹೌದು ಎಂದರು. ರಾಮಮಂದಿರ ನಿರ್ಮಾಣ, ಅಭಿವೃದ್ಧಿಯ ನಾಂದಿಯಾಗಿದೆ. ರಾಮ ವಿವಾದವಲ್ಲಿ ಸಮಾಧಾನ. ಇಂದು ವಿಶ್ವ ಸಂಭ್ರಮಿಸುತ್ತಿದ್ದು, ಇದರ ವ್ಯಾಪಕತೆಗೆ ಸಾಕ್ಷಿಯಾಗಿದೆ ಎಂದರು. ಈ ಮಂದಿರ ಮುಂದಿನ ಸಾವಿರ ವರ್ಷಗಳ ನಂತರದ ಭವ್ಯ ಭಾರತ ನಿರ್ಮಾಣಕ್ಕಾಗಿ ಎಲ್ಲರೂ ಪಣತೊಡಬೇಕೆಂದರು. ದೈವದಿಂದ ದೇಶ ನಿರ್ಮಾಣ ಸಾಧ್ಯವಾಗಲಿದೆ. ಇಂದು ನಿರಾಸಗೆ ಆಸ್ಪದವೇ ಇಲ್ಲ, ಸಶಕ್ತ ರಾಷ್ಟ್ರ ರೂಪಗೊಳ್ಳಬೇಕು ಎಂದರು. ಗುರಿ ಸತ್ಯವಾಗಿದ್ದರೆ. ಪ್ರಾಮಾಣಿಕ ಪ್ರಯತ್ನ ನಡೆದರೆ ಸಾಧನೆ ಸಾಧ್ಯವೆಂದರು. ಇದಕ್ಕೂ ಮುನ್ನ ಮಾತನಾಡಿದ ಗೋವಿಂದ ದೇವಗಿರಿ ಸ್ವಾಮಿಜಿ, ಪ್ರಾಣಪ್ರತಿಷ್ಠಾಪನೆಯಲ್ಲಿ ಯಜಮಾನತ್ವ ವಹಿಸಿದ ಪ್ರಧಾನಮಂತ್ರಿ ನರೇಂದ್ರಯವರು, ಇದಕ್ಕಾಗಿ ಕಠಿಣ ವ್ರತಾಚಾರಣೆ ಮಾಡಿದ್ದನ್ನು ಸ್ಮರಿಸಿ ಶ್ಲಾಘಿಸಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ೫೦೦ ವರ್ಷಗಳ ಬಳಿಕ ಸಾಕಾರಗೊಂಡ ಈ ಕ್ಷಣಗಳನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ. ದೇಶದ ತುಂಬೆಲ್ಲಾ ರಾಮನಾಮ ಅನುಕರಣಿಸುತ್ತಿದೆ ಎಂದರು. ಎಲ್ಲಿ ಮಂದಿರ ಸ್ಥಾಪನೆಯಾಗಬೇಕೆಂಬ ಸಂಕಲ್ಪ ಮಾಡಲಾಗಿತ್ತೋ ಅಂದೇ ಜಾಗದಲ್ಲಿ ಇಂದು ರಾಮಮಂದಿರ ತಲೆ ಎತ್ತಿ ನಿಂತಿದೆ. ಎಲ್ಲ ಮನಸ್ಸಿನಲ್ಲಿ ಇರುವ ರಾಮನ ಚಿತ್ರಕ್ಕೆ ಮೂರ್ತ ಸ್ವರೂಪ ನೀಡಿದ ಶಿಲ್ಪಿಯ ಕಾರ್ಯವು ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅನಾದರಣೆ ಒಳಗಾಗಿದ್ದ ಅಯೋಧ್ಯೆ ಇಂದು ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತಿದೆ ಎಂದು ತಿಳಿಸಿದರು. ಪ್ರಧಾನಿಯವರು ಕನಸಿನಂತೆ ಅಯೋಧ್ಯೆಯಲ್ಲಿ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಮಾತನಾಡಿ, ಇಂದಿನ ಸಂಭ್ರಮಾಚರಣೆಯನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ನವ ಭಾರತ ನಿರ್ಮಾಣಕ್ಕೆ ಇಂದು ಸಾಂಕ್ಷಿಯಾಗಿದೆ. ರಾಮರಾಜ್ಯ ನಿರ್ಮಾಣಕ್ಕೆ ಎಲ್ಲರ ಭಾಗವಹಿಸುವಿಕೆ ಮುಖ್ಯವಾಗಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್
