ದೆಹಲಿ, 19ಅಕ್ಟೋಬರ್ :
ಆ್ಯಂಕರ್ :
ತೆಲಂಗಾಣ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷವು ಅಧಿಕಾರ ಹಿಡಿಯುವ ಹಂಬಲದಲ್ಲಿದೆ. ಮೊದಲ ಪಟ್ಟಿ ಆಖೈರುಗೊಳಿಸುವ ಸಲುವಾಗಿ ಕೇಂದ್ರ ಸಚಿವ, ಬಿಜೆಪಿ ರಾಜ್ಯಾಧ್ಯಕ್ಷ ಕಿಶನ್ ರೆಡ್ಡಿ ಹಾಗೂ ಪಕ್ಷದ ಪ್ರಮುಖ ನಾಯಕರಾದ ಡಾ. ಕೆ. ಲಕ್ಷ್ಮಣ್, ಬಂಡಿ ಸಂಜಯ್ ದೆಹಲಿ ತಲುಪಿದ್ದಾರೆ ಈ ಮೂವರು ನಾಯಕರು ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಜತೆಗೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರೊಂದಿಗೆ ನಡೆದ ಚರ್ಚೆಯ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ.
ಇದೇ ಸಂದರ್ಭದಲ್ಲಿ ಮೊದಲ ಪಟ್ಟಿಗೆ ಅಂತಿಮ ಸ್ಪರ್ಶ ನೀಡುವ ಸಾಧ್ಯತೆಯೂ ಇದೆ. ನಂತರ ಸಂಜೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಈ ಪಟ್ಟಿಯನ್ನು ಚರ್ಚಿಸಿ ಅನುಮೋದಿಸಲಾಗುವುದು. ಸುಮಾರು 50-60 ಮಂದಿ ಸಂಭಾವ್ಯ ಅಭ್ಯರ್ಥಿಗಳೊಂದಿಗೆ ಮೊದಲ ಪಟ್ಟಿ ಬಿಡುಗಡೆಗೆ ಸಿದ್ಧವಾಗಿದೆ ಎಂದು ಪಕ್ಷದ ಮೂಲಗಳು ಬಹಿರಂಗಪಡಿಸಿವೆ.
ತೆಲಂಗಾಣ ವಿಧಾನಸಭೆ ಚುನಾವಣೆ ಕಣದಲ್ಲಿ ದೊಡ್ಡ ನಾಯಕರು?
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ದೊಡ್ಡ ನಾಯಕರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಮಧ್ಯ ಪ್ರದೇಶದಲ್ಲಿ ಜಾರಿಗೆ ತರುತ್ತಿರುವ ತಂತ್ರವನ್ನು ತೆಲಂಗಾಣದಲ್ಲೂ ಜಾರಿಗೆ ತರಲು ಕಮಲ ದಳ ನಾಯಕತ್ವ ನಿರ್ಧರಿಸಿದ್ದರೆ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕತ್ವದ ಪ್ರಮುಖ ಸ್ಥಾನದಲ್ಲಿರುವ ಕೇಂದ್ರ ಸಚಿವರು, ಸಂಸದರು ಹಾಗೂ ಹಿರಿಯ ನಾಯಕರೂ ಸಹ ಸ್ಪರ್ಧಿಸುವ ಸಾಧ್ಯತೆ ಇದೆ. ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಂದೇ ಕ್ಷೇತ್ರದಿಂದ ಮೂವರು ಕೇಂದ್ರ ಸಚಿವರು ಮತ್ತು ನಾಲ್ವರು ಸಂಸದರನ್ನು ಕಣಕ್ಕಿಳಿಸಿದೆ.
