ರಾಯಚೂರು, 17 ಅಕ್ಟೋಬರ್ (ಹಿ.ಸ):
ಆ್ಯಂಕರ್ : ನಗರ ಸೇರಿದಂತೆ ಜಿಲ್ಲೆಯಲ್ಲಿರುವ ಪ್ರತಿಯೊಂದು ಸಮಾಜವೂ ತಮ್ಮದೇಯಾದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರತಿಭಾನ್ವಿತ ಯುವಕರಿಗೆ ವೇದಿಕೆ ಕಲ್ಪಿಸುವ ಮೂಲಕ ಈ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ದೊರೆಯುವಂತೆ ಮಾಡುವ ಅಗತ್ಯವಿದೆಂದು ಸಾಂಸ್ಕೃತಿಕ ರೂವಾರಿ, ಮುನ್ನೂರುಕಾಪು ಸಮಾಜದ ಹಿರಿಯರು ಹಾಗೂ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ ಅವರು ಹೇಳಿದರು.
ನವರಾತ್ರಿ ಉತ್ಸವದ ಅಂಗವಾಗಿ ಇಂದು ನಡೆದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.1956ರಿಂದ 1960 ರವರೆಗೆ ಕರ್ನಾಟಕ ಸಂಘದಿಂದ
ಸಾಂಸ್ಕೃತಿಕ ಅಧ್ಯಕ್ಷರಾಗಿರುವ ತಿರುಮಲರಾವ್ ಅವರು ಸಂಘದಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಈ ಕಾರ್ಯಕ್ರಮಗಳಿಂದ ಈ ಭಾಗದ ಸಾಂಸ್ಕೃತಿಕ ಪ್ರತಿಭೆ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ದೊರೆಯುತ್ತಿತ್ತು. ಆದರೆ, ನಂತರದ ಕಾಲಗಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯದಿರುವುದು ಅನೇಕ ಪ್ರತಿಭೆಗಳು ಅವಕಾಶ ವಂಚಿತಗೊಳ್ಳುವಂತಾಗಿವೆ. ಈ ಹಿಂದೆ ಬ್ರಾಹ್ಮಣ, ವೈಶ್ಯ ಸಮುದಾಯಗಳಿಗೆ ಮಾತ್ರ ಸೀಮಿತವಾಗಿದ್ದ ಕಾರ್ಯಕ್ರಮಗಳು ಕ್ಷೀಣಿಸಿದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೆಂದರೆ, ಕೇವಲ ಮೈಸೂರು, ಬೆಂಗಳೂರು ಭಾಗ ಎನ್ನುವಂತಾಗಿದೆ. ಆದರೆ, ಹಿಂದುಳಿದ ಸಮಾಜವಾದ ಮುನ್ನೂರುಕಾಪು ಸಮಾಜ ಕಳೆದ 20 ವರ್ಷಗಳಿಂದ ಸಾಂಸ್ಕೃತಿಕ ರೂವಾರಿಯಾಗಿ ಮುಂಗಾರು ಸಾಂಸ್ಕೃತಿಕ ಹಬ್ಬದೊಂದಿಗೆ ಈಗ ದಸರಾ ನವರಾತ್ರೋತ್ಸವ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಈ ಭಾಗದಲ್ಲಿ ಪ್ರತಿಭಾನ್ವಿತ ಸಾಂಸ್ಕೃತಿಕ ತಂಡಗಳಿಗೆ ವೇದಿಕೆ ಒದಗಿಸುತ್ತದೆ. ಈ ರೀತಿ ವಿವಿಧ ಸಮುದಾಯಗಳು ಕಾರ್ಯಕ್ರಮಗಳನ್ನು ರೂಪಿಸುವತ್ತ ಗಮನ ಹರಿಸಬೇಕು. ನಗರದಲ್ಲಿ ಕೋಟ್ಯಾಂತರ ರೂ.ಸಂಪಾದಿಸುವ ಶ್ರೀಮಂತರು ತಮ್ಮ ತಮ್ಮ ಸಮಾಜದಲ್ಲಿ ಕಾರ್ಯಕ್ರಮ ರೂಪಿಸಲು ಉದಾತ್ತವಾಗಿ ನೆರವು ನೀಡಿ, ಸಾಂಸ್ಕೃತಿಕ ಮೆರಗು ಎತ್ತಿ ಹಿಡಿಯಬೇಕಾಗಿದೆ.
ಕರ್ನಾಟಕ ಸಂಘದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಪ್ರೇರಣೆಯಿಂದ ಈ ಭಾಗದಲ್ಲಿ ಸಾಂಸ್ಕೃತಿಕ ಚಟುವಟಿಕೆ ನಿರ್ವಹಿಸಬೇಕೆಂಬ ಉದ್ದೇಶದಿಂದ ಸಮಾಜವೂ ಈ ಕಾರ್ಯಕ್ರಮ ನಡೆಸುತ್ತಿದೆಂದು ಹೇಳಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಸಮಾಜಗಳು ಕಾರ್ಯಕ್ರಮ ಆಯೋಜನೆಗೆ ಮುಂದಾಗಲಿ ಎಂದು ಕರೆ ನೀಡಿದರು. ಈ ಕಾರ್ಯಕ್ರಮವನ್ನು ಟಾಗೋರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಆರ್. ಕೆ ಅಮರೇಶ ಅವರು ತಬಲ ಬರಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅಯ್ಯಪ್ಪಯ್ಯಾ ಹುಡಾ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಸುಧೀರ್ಘವಾಗಿ ಮಾತನಾಡಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಂಬಾಳ್ವೆ ಪ್ರೌಢ ಶಾಲೆ, ಶಾರದಾ ಶಾಲೆ, ಕೆಇಬಿ ಪ್ರೌಢ ಶಾಲೆ, ಮತ್ತು ಚಂದ್ರಶೇಖರ ದಂಡಿನ್ ಕಲಾ ವಿದ್ಯಾರ್ಥಿಗಳು ಸೇರಿದಂತೆ ಇತರೆ ವಿದ್ಯಾರ್ಥಿಗಳು ಅತ್ಯುತ್ತಮವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಮೂಲಕ ಜನರ ಮೆಚ್ಚಿಗೆಗೆ ಪಾತ್ರರಾದರು. ಧಾರ್ಮಿಕ ಮತ್ತು ಗ್ರಾಮೀಣ ಸೊಗಡಿನ ನೃತ್ಯ ರೂಪಕಗಳನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಬೆಲ್ಲಂ ನರಸರೆಡ್ಡಿ,ಉಟೂಕುರು ಕೃಷ್ಣಮೂರ್ತಿ, ಹರವಿ ನಾಗಣ್ಣಗೌಡ, ತಿಮ್ಮರೆಡ್ಡಿ, ಶ್ರೀನಿವಾಸ್ ರೆಡ್ಡಿ, ನಿಂಬೆಕಾಯಿ ಭೀಮರೆಡ್ಡಿ, ಬುಡ್ಡಪ್ಪಗಾರು ಆಂಜಿನೇಯ, ಎಸ್ ಕೆ, ನಾಗರೆಡ್ಡಿ,ಬಿ ತಿಮ್ಮರೆಡ್ಡಿ, ಎನ್ ಶ್ರೀನಿವಾಸ್ ರೆಡ್ಡಿ,ಜಿ ವೆಂಕಟರೆಡ್ಡಿ, ವೆಂಕಟಪೂರು ಬಸವರಾಜಪ್ಪ, ಎಸ್. ಕೆ ನಾಗರೆಡ್ಡಿ, ಗುಡ್ಸಿ ಪ್ರತಾಪ್ ರೆಡ್ಡಿ, ಕೃಷ್ಣಮೂರ್ತಿ, ಪಾಳ್ಯಂ ಮಲ್ಲೇಶ, ಫಕೀರಪ್ಪಗಾರು ನರಸರೆಡ್ಡಿ,ಮುನ್ನೂರುಕಾಪು ಸಮಾಜದ ಹಿರಿಯ ಮುಖಂಡರು ಸೇರಿದಂತೆ ಅನೇಕರು ಇದ್ದರು.
ಹಿಂದೂಸ್ತಾನ್ ಸಮಾಚಾರ್
