ಅಯೋಧ್ಯೆ, 22 ಜನವರಿ(ಹಿ.ಸ):
ಆ್ಯಂಕರ್ :
ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದು, ಒಂದೂವರೆ ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ ಎಂದು ಹೇಳಿದ್ದಾರೆ. ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಜತೆ ಮುಂಜಾನೆಯೇ ಅವರು ಅಯೋಧ್ಯೆಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ್ದು, ಅಸಂಖ್ಯಾತ ಕರಸೇವಕರ ಹೋರಾಟ, ತ್ಯಾಗ-ಬಲಿದಾನದ ಫಲ ಸಾಕಾರವಾಗಿದೆ ಎಂದು ಉಲ್ಲೇಖಿಸಿದ್ದಾರೆ.
‘ಒಂದೂವರೆ ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ. ಅಸಂಖ್ಯಾತ ಕರಸೇವಕರ ಹೋರಾಟ, ತ್ಯಾಗ-ಬಲಿದಾನದ ಫಲ ಸಾಕಾರವಾಗಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿ ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಪ್ರಧಾನಿಗಳಾದ ಮಾನ್ಯ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ನೆರವೇರುತ್ತಿದೆ. ಈ ಎಲ್ಲಾ ಕರಸೇವಕರ ಪರಿಶ್ರಮದ ಫಲದಿಂದ ಇಂತಹ ದಿವ್ಯಕ್ಷಣಕ್ಕೆ ಪ್ರತ್ಯಕ್ಷ ಸಾಕ್ಷಿಯಾಗುವ ಪುಣ್ಯ ನನಗೆ ದಕ್ಕಿದೆ ಮತ್ತು ಶ್ರೀರಾಮ ದೇವರಿಗೆ ಭಕ್ತಿ ಸಮರ್ಪಣೆ ಮಾಡುವ ಸುದೈವವೂ, ಅವಕಾಶವು ನನ್ನದಾಗಿದೆ. ಎಲ್ಲ ಕರಸೇವಕರನ್ನೂ ಸ್ಮರಿಸುತ್ತಾ, ಈ ಸುಸಂದರ್ಭದಲ್ಲಿ ಸಮಸ್ತ ರಾಮಭಕ್ತರಿಗೆ ಶುಭಾಶಯಗಳನ್ನು ಕೋರುತ್ತೇನೆ. ಪ್ರತಿಯೊಬ್ಬರಿಗೂ ಆ ರಾಮದೇವರು ಸುಖ-ಶಾಂತಿ, ನೆಮ್ಮದಿ-ಸಮೃದ್ಧಿಯನ್ನು ಕರುಣಿಸಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ’ ಎಂದು ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
