ದೆಹಲಿ, 10 ಜನವರಿ(ಹಿ.ಸ):
ಆ್ಯಂಕರ್ :ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಸ್ಥಾನ ಪಡೆಯದ ಶ್ರೇಯಸ್ ಅಯ್ಯರ್ ಇದೀಗ ರಣಜಿ ಕ್ರಿಕೆಟ್ನತ್ತ ಮುಖ ಮಾಡಿದ್ದಾರೆ. ಇದರೊಂದಿಗೆ ಅಯ್ಯರ್ ಅವರನ್ನು ಟಿ20 ತಂಡದಿಂದ ಕೈ ಬಿಟ್ಟಿರುವುದು ಖಚಿತವಾಗಿದೆ. ಇದಕ್ಕೂ ಮುನ್ನ ಶ್ರೇಯಸ್ ಅಯ್ಯರ್ ವಿಶ್ರಾಂತಿಯ ಕಾರಣ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ ಎನ್ನಲಾಗಿತ್ತು.
ಆದರೀಗ ಜನವರಿ 12 ರಿಂದ ಶುರುವಾಗಲಿರುವ ಆಂಧ್ರ ಪ್ರದೇಶ ವಿರುದ್ಧ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿಯಲು ಶ್ರೇಯಸ್ ಅಯ್ಯರ್ ಸಜ್ಜಾಗಿದ್ದಾರೆ. ಈ ಪಂದ್ಯಕ್ಕೆ ಆಯ್ಕೆ ಮಾಡಲಾದ ಮುಂಬೈ ತಂಡದಲ್ಲಿ ಅಯ್ಯರ್ ಸ್ಥಾನ ಪಡೆದಿದ್ದು, ಅದರಂತೆ ದೇಶೀಯ ಅಂಗಳದ ಮತ್ತೆ ಮಿಂಚಿಲು ಅಣಿಯಾಗುತ್ತಿದ್ದಾರೆ.
ಸರ್ಫರಾಝ್-ತುಷಾರ್ ಅಲಭ್ಯ:
ಬಿಹಾರ ವಿರುದ್ಧದ ಮೊದಲ ಪಂದ್ಯದಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ ಸರ್ಫರಾಝ್ ಖಾನ್ ಹಾಗೂ ತುಷಾರ್ ದೇಶಪಾಂಡೆ ದ್ವಿತೀಯ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಈ ಇಬ್ಬರು ಆಟಗಾರರು ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದು, ಹೀಗಾಗಿ ಆಂಧ್ರ ಪ್ರದೇಶ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ರಹಾನೆ ಕ್ಯಾಪ್ಟನ್:
ಈ ಬಾರಿಯ ರಣಜಿ ಟೂರ್ನಿಯಲ್ಲಿ ಮುಂಬೈ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸುತ್ತಿದ್ದಾರೆ. ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ರಹಾನೆ ಇದೀಗ ದೇಶೀಯ ಟೂರ್ನಿಯಲ್ಲಿ ಮಿಂಚುವ ಮೂಲಕ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ. ಇತ್ತ ಟಿ20 ತಂಡದಿಂದ ಹೊರಬೀಳುತ್ತಿದ್ದಂತೆ ಶ್ರೇಯಸ್ ಅಯ್ಯರ್ ಕೂಡ ರಣಜಿ ಕ್ರಿಕೆಟ್ನತ್ತ ಮುಖ ಮಾಡಿರುವುದು ವಿಶೇಷ.
ಮುಂಬೈ ತಂಡ: ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್ ಅಯ್ಯರ್, ಜೇ ಬಿಸ್ತಾ, ಭೂಪೇನ್ ಲಾಲ್ವಾನಿ, ಅಮೋಘ್ ಭಟ್ಕಳ್, ಸುವೇದ್ ಪರ್ಕರ್, ಪ್ರಸಾದ್ ಪವಾರ್ (ವಿಕೆಟ್ ಕೀಪರ್), ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಅಥರ್ವ ಅಂಕೋಲೆಕರ್, ಮೋಹಿತ್ ಅವಸ್ತಿ, ಧವಲ್ ಕುಲಕರ್ಣಿ, ರೊಯ್ಸಟನ್ ಡಯಸ್, ಸಿಲ್ವೆಸ್ಟರ್ ಡಿಸೋಜಾ.
ಭಾರತ-ಅಫ್ಘಾನಿಸ್ತಾನ್ ಟಿ20 ಸರಣಿ:
ಭಾರತ-ಅಫ್ಘಾನಿಸ್ತಾನ್ ನಡುವಣ ಟಿ20 ಸರಣಿಯು ಜನವರಿ 11 ರಿಂದ ಶುರುವಾಗಲಿದೆ. 3 ಪಂದ್ಯಗಳ ಈ ಟಿ20 ಸರಣಿಗಾಗಿ ಆಯ್ಕೆ ಮಾಡಲಾದ 16 ಸದಸ್ಯರ ತಂಡದಲ್ಲಿ ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಸೇರಿದಂತೆ ಕೆಲ ಪ್ರಮುಖ ಆಟಗಾರರು ಸ್ಥಾನ ಪಡೆದಿಲ್ಲ.
ಹಿಂದೂಸ್ತಾನ್ ಸಮಾಚಾರ್
