ಬೆಂಗಳೂರು, 25 ಡಿಸೆಂಬರ್(ಹಿ.ಸ):
ಆ್ಯಂಕರ್ :
‘ಕಾಂತಾರ’ ಸಿನಿಮಾ ಕರಾವಳಿ, ಮಲೆನಾಡು ಭಾಗದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಕಾರ್ಯ ಮಾಡಿತ್ತು. ಆ ಸಿನಿಮಾ ಹಿಟ್ ಆದ ಸಮಯದಲ್ಲಿ ಕರ್ನಾಟಕದ ವಿವಿಧ ಭಾಗಗಳ ಕತೆಗಳು ಸಿನಿಮಾ ಆಗಬೇಕಾದ ಅವಶ್ಯಕತೆ ಬಗ್ಗೆ ಚರ್ಚೆ ಎದ್ದಿತ್ತು. ಅದರಲ್ಲಿಯೂ ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ಕರ್ನಾಟಕದವರಿಗೆ ಪರಿಚಯಿಸುವ ಅಗತ್ಯವಿದೆ. ಆ ಕಾರ್ಯವನ್ನು ಉತ್ತರ ಕರ್ನಾಟಕದವರೇ ಮಾಡಬೇಕು ಎಂದು ರಕ್ಷಿತ್ ಶೆಟ್ಟಿ ಹೇಳಿದ್ದರು. ಇದಾದ ಕೆಲವೇ ತಿಂಗಳಲ್ಲಿ ಇದೀಗ ಉತ್ತರ ಕರ್ನಾಟಕ ಭಾಗದ ಕತೆ ಹೊತ್ತು ‘ದೇಸಾಯಿ’ ಹೆಸರಿನ ಸಿನಿಮಾ ಬಿಡುಗಡೆಗೆ ರೆಡಿಯಾಗುತ್ತಿದೆ.
ವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ನಿರ್ಮಾಣ ಸಂಸ್ಥೆಯು ‘ದೇಸಾಯಿ’ ಸಿನಿಮಾ ಮೂಡಿ ಬರುತ್ತಿದೆ. ಮಹಾಂತೇಶ ವಿ ಚೋಳದಗುಡ್ಡ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ ಹಾಗೂ ನಾಗಿರೆಡ್ಡಿ ಭಡ ನಿರ್ದೇಶನ ಮಾಡುತ್ತಿದ್ದಾರೆ. ‘ದೇಸಾಯಿ’ ಸಿನಿಮಾಕ್ಕೆ ಡಬ್ಬಿಂಗ್ ಕಾರ್ಯ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ‘ಲವ್ 360’ ಖ್ಯಾತಿಯ ಪ್ರವೀಣ್ ಕುಮಾರ್ ಈ ಸಿನಿಮಾದ ನಾಯಕನಾಗಿ ನಟಿಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
